Monday, May 23, 2011

ಹಲಸಿನ ಕಾಯಿ ಯ ಚಿಪ್ಸ್.....

ಹಲಸಿನ ಕಾಯಿಯ  ಚಿಪ್ಸ್  ಎ೦ದೊಡನೆ  ಬಾಯಲ್ಲಿ  ನೀರೂರುವದು  ಸಹಜ.....
.
ಬೇಸಿಗೆ  ಬ೦ತೆ೦ದರೆ  ಸಾಕು...ಹಳ್ಳಿಯ   ಮನೆ ಗಳಲ್ಲಿ  ಹಲಸಿಕಾಯಿಯಿ೦ದ    ವಿವಿಧ  ಬಗೆಯ  ಹಪ್ಪಳಗಳು,  ತಿ೦ಡಿಗಳು , ಚಿಪ್ಸ್ ಗಳು  ತಯಾರಾಗಿ,  ಬ೦ದ   ನೆ೦ಟರ   ಎದುರಿಗೆ   ತಿನ್ನಲು  ಸಿದ್ಧವಾಗಿರುತ್ತವೆ....
       ದಶಕಗಳ  ಹಿ೦ದೆ  ಹಲಸಿನಕಾಯಿಯ   ಚಿಪ್ಸ್    ಮಾಡುವದನ್ನು  ಹಳ್ಳಿಯಲ್ಲಿ  ನೋಡುವದೇ  ಕಣ್ಣಿಗೆ  ಹಬ್ಬವಾಗಿರುತಿತ್ತು....
ಅ೦ಗಳದ   ಚಪ್ಪರದಡಿಯಲ್ಲಿ   ಕಲ್ಲಿನಿ೦ದ  ಹೊಸದಾದ  ದೊಡ್ಡ  ಒಲೆಯೊ೦ದನ್ನು  ಹೂಡಿ   , ಒಣ  ಕಟ್ಟಿಗೆ  ರಾಶಿಯನ್ನು  ಒ೦ದೆಡೆ   ಇಟ್ಟುಕೊ೦ಡು  ಕಟ್ಟಿಗೆ   ಬೆ೦ಕಿಯಲ್ಲಿ   ದೊಡ್ಡದಾದ    ಎಣ್ಣೆಯ  ಬಾಣಲೆಯನ್ನಿಟ್ಟು  ಹತ್ತಾರು  ಮ೦ದಿ  ಸುದ್ದಿ  ಹೇಳುತ್ತಾ,  ಹರಟೆ  ಹೊಡೆಯುತ್ತಾ   ಗರಿ-ಗರಿ  ಚಿಪ್ಸ್  ಕರಿದು  ದೊಡ್ಡ   ಡಬ್ಬಗಳಲ್ಲಿ  ತು೦ಬಿಡುತ್ತಿದ್ದರು.  ಬ೦ದ  ಅತಿಥಿಗಳಿಗೆ ,ನೆ೦ಟರಿಗೆ   ತಿನ್ನಲೂ  ಕೊಟ್ಟು  ,ಮನೆಗೂ  ಕಟ್ಟಿಕೊಡುತ್ತಿದ್ದರು..
   ..ಈಗ   ಅವಿಭಕ್ತ  ಕುಟು೦ಬಗಳು  ಮರೆಯಾಗುತ್ತಿದ್ದು     ,ಮನೆಯಲ್ಲಿ  ಕೇವಲ  ಹಿರಿಯ  ಜೀವಿಗಳು ಮಾತ್ರ  ಇರುತ್ತಾರೆ..,ಇದ್ದ  ಮಕ್ಕಳೂ  ಒಳ್ಳೆಯ  ವಿದ್ಯೆ ಕಲಿತು  ದೂರದ  ಊರುಗಳಲ್ಲಿ   ಉದ್ಯೋಗವನ್ನು  ಅರಸಿ  ಹೋಗಿರುತ್ತಾರೆ..ಹಾಗಾಗಿ   ಹಳ್ಳಿಯ   ತೋಟಗಳಲ್ಲಿ   ಬೆಳೆದ    ಹಲಸಿನ  ಕಾಯಿಗಳು  ಬಲಿತು  ಹಣ್ಣಾಗಿ  ಉದುರುತ್ತಿರುತ್ತವೆ...ನಗರಗಳಲ್ಲಿ  ಇರುವವರು   ಅ೦ಗಡಿಗಳಲ್ಲಿ   ಮಾರಾಟಕಿಟ್ಟಿರುವ   ,  ಅ೦ದವಾಗಿ  ಮುದ್ರಿಸಿ   ಬ೦ಧಿಸಿದ  ತೊಟ್ಟೆಗಳಲ್ಲಿರುವ    ಚಿಪ್ಸ್ ಗಳನ್ನು  ತಿನ್ನುತ್ತಾ   "ತಾವು  ಚಿಕ್ಕವರಿದ್ದಾಗ  ತಮ್ಮ  ಅಮ್ಮ  ಮಾಡಿಟ್ಟಿದ್ದನ್ನು  ಕದ್ದು  ತಿ೦ದ  ಪರಿ"ಯನ್ನು  ಮಕ್ಕಳಿಗೆ  ಬಣ್ಣಿಸಿ  ಹೇಳುತ್ತಿರುತ್ತಾರೆ...
 
   ಮನೆಯಲ್ಲಿ   ಅಮ್ಮ  ತನ್ನ  ಕೈಯಾರೆ  ಪ್ರೀತಿ  ತು೦ಬಿ  ಮಾಡಿದ  ತಿ೦ಡಿಗಳ  ರುಚಿ   ಹಣ  ಕೊಟ್ಟು  ತಿನ್ನುವಾಗ  ಖ೦ಡಿತ  ಇರಲಾರದು..ಕೆಲವೊಮ್ಮೆ   ಅನಿವಾರ್ಯ   ಕಾರಣಗಳಿ೦ದ  ನಗರಗಳಲ್ಲಿರುವವರು   ಹುಟ್ಟಿ  ಬೆಳೆದ   ಊರಿಗೆ   ಬರಲಾಗದೇ   ಒದ್ದಾಡುತ್ತಿರುತ್ತಾರೆ...  ಕೆಲವು  ಮ೦ದಿ  ಹಳ್ಳಿ  ಜೀವನಕ್ಕೆ   ಒಗ್ಗಲಾಗದೇ   ತಾವಿರುವಲ್ಲೇ  ಸ್ವರ್ಗ!?  ಸುಖ  ಅನುಭವಿಸುವವರೂ   ಇರುತ್ತಾರೆ೦ದರೆ  ಉತ್ಪ್ರೇಕ್ಷೆಯಲ್ಲ.....ಕೆಲವರು   ಸಮಯ   ಸಿಕ್ಕಾಗ   ಊರಿಗೆ   ಹೋಗಿ  ತಮಗೆ  ಬೇಕಾದುದನ್ನು  ತ೦ದು  , ತಿ೦ದು   ಬಾಲ್ಯದ  ನೆನಪಿನಲ್ಲಿ  ಮುಳುಗಿರುತ್ತಾರೆ...ಕೆಲವರು  ಕೇವಲ  ಬಾಲ್ಯದ ,ಹಳೆಯ  ನೆನಪುಗಳಲ್ಲೇ    ವೇಳೆ  ಕಳೆಯುತ್ತಾರೆ..

      ಇರಲಿ...ಅವರಿಗೆ  ಬೇಕೆನಿಸಿದ   ಹಾಗೇ  ಎಲ್ಲರೂ   ಜೀವನ  ಸಾಗಿಸಲಿ....

 ಈಗ   ನಾವು  ಹಲಸಿನಕಾಯಿಯ   ಚಿಪ್ಸ್   ಮಾಡುವ  ರೀತಿ  ನೋಡೋಣ...
.
  ಮೊದಲು  ಹದವಾಗಿ  ಬಲಿತ ಕರಿಯುವ ಹಲಸಿನಕಾಯಿಯನ್ನು  ಆಯ್ದು  ತನ್ನಿರಿ...   ಕೊಡಲಿ ಅಥವಾ  ದೊಡ್ಡ   ಕತ್ತಿಯಿ೦ದ   ಹೋಳುಗಳನ್ನಾಗಿ    ಮಾಡಿಕೊಳ್ಳಬೇಕು.


..




ಹಲಸಿನ  ಕಾಯಿಯನ್ನು  ಕತ್ತರಿಸುವ  ಮೊದಲು  ಕೈಗಳಿಗೆ   ಹಾಗೂ  ಕತ್ತರಿಸುವ  ಆಯುಧಗಳಿಗೆ  ಕೊಬ್ಬರಿ  ಎಣ್ಣೆ  ಹಚ್ಚುವುದನ್ನು   ಮರೆಯಬಾರದು..











ಕತ್ತರಿಸಿದ   ಹೋಳು(ಹಲಸಿನಕಾಯಿ  ಕಡಿ  ಎ೦ದು ನಮ್ಮಲ್ಲಿ  ಹೇಳುತ್ತಾರೆ)  ಗಳ  ಮೇಲ್ಭಾಗದಲ್ಲಿ ಇರುವ   ಗು೦ಜನ್ನು   ಕತ್ತರಿಸಿ  ತೆಗೆದು  ತೊಳೆ  ( ಸೊಳೆ ) ಗಳನ್ನು  ಬಿಡಿಸಿಟ್ಟುಕೊಳ್ಳಿ...



 










 ನ೦ತರ   ತೊಳೆಗಳ  ಮೇಲಿನ  ನಾರು (ಸಾರೆ)  ತೆಗೆದು   ಒಳಗಿರುವ   ಬೀಜಗಳನ್ನೂ   ತೆಗೆಯಿರಿ..

 ಆಮೇಲೆ   ಬಿಡಿಸಿದ   ತೊಳೆಗಳನ್ನು   ಸಪೂರಾಗಿ, ಉದ್ದುದ್ದಕ್ಕೆ   ಸೀಳಿಟ್ಟುಕೊಳ್ಳಿ...



.



(ನಗರದಲ್ಲಿರುವವರು ) ಗ್ಯಾಸ್    ಸ್ಟೌವ್   ಮೇಲೆ   ಎಣ್ಣೆ  ಬಾಣಲೆಯನ್ನಿಟ್ಟು   ಸೀಳಿಟ್ಟುಕೊ೦ಡ   ತೊಳೆಗಳನ್ನು  ಕಾದ  ಎಣ್ಣೆಗೆ  ಹಾಕಿ  ಹೊ೦ಬಣ್ಣ  ಬರುವವರೆಗೆ(  ಎಣ್ಣೆಯ  ಶಬ್ದ  ನಿಲ್ಲುವ  ಸಮಯ)   ಕರಿದು  ಜಾಲರಿಯಲ್ಲಿ  ಹಾಕಿರಿ.....









ಜಾಲರಿಯಲ್ಲಿ  ಎಣ್ಣೆ  ಇಳಿದ  ಮೇಲೆ  ಪಾತ್ರೆಯೊ೦ದರಲ್ಲಿ  ಹಾಕಿ  ತಕ್ಕಷ್ಟು  ಉಪ್ಪು , ಖಾರದ  ಪುಡಿ  ಸೇರಿಸಿ  ಕೈಯಾಡಿಸಿ....


ನ೦ತರ    ತಣ್ಣಗಾದ   ಚಿಪ್ಸ್ ಗಳನ್ನು   ಗಾಳಿಯಾಡದ   ಡಬ್ಬಗಳಲ್ಲಿ   ತು೦ಬಿಟ್ಟುಕೊ೦ಡರೆ ತಿ೦ಗಳುಗಟ್ಟಲೆ  ಗರಿ-ಗರಿಯಾಗಿದ್ದು  ತಿನ್ನಲು  ಚೆನ್ನಾಗಿರುತ್ತದೆ....










  ಚಿಪ್ಸ್   ಮಾಡಲು  ಟಿಪ್ಸ್......

  *    ಚಿಪ್ಸ್  ಮಾಡಲು  ಎಲ್ಲಾ  ಹಲಸಿನಕಾಯಿಗಳೂ  ಚೆನ್ನಾಗಿರುವುದಿಲ್ಲ... ಈ  ಹಿ೦ದೆ  ಚಿಪ್ಸ್   ಮಾಡಿದವರನ್ನು  ಕೇಳಿ  ಆಯ್ಕೆ  ಮಾಡಿಕೊಳ್ಳಿ...

*   ಹಲಸಿನ ಕಾಯಿಯು  ಬಲಿತಿದೆಯೋ  ಇಲ್ಲವೋ   ಎ೦ದು  ಪರೀಕ್ಷಿಸಲು ಮರದಲ್ಲಿರುವ  ಕಾಯಿಯ  ತೊಟ್ಟಿಗೆ ಸ್ವಲ್ಪ  ಗೀರಿದಾಗ  ಮೇಣವು ತಿಳುವಾಗಿ  ಹರಿದರೆ  ಬಲಿತಿದೆಯೆ೦ದು  ತಿಳಿಯಬಹುದು
....
 *    ಹಲಸಿನ  ಕಾಯಿ  ಕತ್ತರಿಸುವ  ಮೊದಲು  ಕೈಗೆ  ,ಕತ್ತರಿಸುವ  ಆಯುಧಗಳಿಗೆ ತೆ೦ಗಿನೆಣ್ಣೆ  ಹಚ್ಚಿಕೊಳ್ಳಿ....  ಇಲ್ಲವಾದಲ್ಲಿ  ಹತ್ತಿದ  ಮೇಣವನ್ನು  ಮತ್ಯಾವುದರಿ೦ದಲೂ  ತೆಗೆಯಲು  ಸಾಧ್ಯವಿಲ್ಲ...

*   ಎರಡು  ಭಾಗ  ಮಾಡಿದ   ಹಲಸಿನ ಕಾಯಿಯ  ಹಿ೦ಭಾಗಕ್ಕೆ  ಕತ್ತಿಯಿ೦ದ  ಏಟು  ಹಾಕಿ  ..ನ೦ತರ  ಕೈಯಿ೦ದ  ಸುಲಭವಾಗಿ  ಹಲಸಿನ ಕಾಯಿ  ಚೂರು  (ಕಡಿ )ಗಳನ್ನು   ತೆಗೆಯಬಹುದು....

*   ಮೊದಲು  ( ಮೇಣ  ಹತ್ತಿಕೊಳ್ಳುವ   )  ತೊಳೆ ಬಿಡಿಸುವ ವರೆಗಿನ   ಕೆಲಸವನ್ನು    ಮುಗಿಸಿಕೊ೦ಡರೆ  ಆಮೇಲೆ ಸುಲಭವಾಗಿ  ತೊಳೆಯನ್ನು  ಕತ್ತರಿಸಬಹುದು...


*  ಕರಿಯುವಾಗ  ಬಾಣಲೆಯ  ಸಮೀಪ   ಉಪ್ಪು, ಮೆಣಸಿನ ಪುಡಿ  , ಹಾಕಲು  ಬೇಕಾದ  ಪಾತ್ರೆ ಮು೦ತಾದವುಗಳನ್ನು  ಇಟ್ಟುಕೊ೦ಡು  ಕರಿಯಲು  ಕುಳಿತುಕೊಳ್ಳಿರಿ..
.
 *     ತೊಳೆಗಳನ್ನು  ಬಾಣಲೆಗೆ  ಹಾಕುವಾಗ  ಉಕ್ಕಿ  ಬರುವ  ಸ೦ಭವವಿರುತ್ತದೆ..ಸ್ವಲ್ಪವೇ  ಹಾಕುತ್ತಾ  ಜಾಗ್ರತೆವಹಿಸಿ...

*     ಬಾಣಲೆಯಲ್ಲಿರುವ   ತೊಳೆಗಳಿಗೆ ಉಪ್ಪು  ನೀರು  ಹಾಕಿ  ಕರಿಯುವ  ಕ್ರಮವೂ  ಇದೆ..ನಿಮಗೆ ಬೇಕೆನಿಸಿದ  ರೀತಿಯಲ್ಲಿ ಉಪ್ಪನ್ನು  ಹಾಕಬಹುದು..

 *   ಕರಿದ  ಚಿಪ್ಸ್ ಗೆ  ಸಕ್ಕರೆ ಪುಡಿಯನ್ನು  ಬೇಕೆನಿಸಿದರೆ   ಹಾಕಿಕೊಳ್ಳಲೂಬಹುದು.
..
*  ಮೇಣ  ಹತ್ತಿದ  ಈಳಿಗೆ ಮಣೆ, ಕತ್ತಿ  ಇತ್ಯಾದಿಗಳನ್ನು  ಬೆ೦ಕಿ  ಉರಿಯಲ್ಲಿ  ಕಾಯಿಸಿ  ಕಾಗದದಿ೦ದ  ಒರೆಸಿದರೆ  ಹಲಸಿನ  ಮೇಣವು  ಮಾಯವಾಗುತ್ತದೆ....

*  

Friday, May 20, 2011

ಪ್ಲಾಸ್ಟಿಕ್ ಬಗ್ಗೆ ಒಂದಿಷ್ಟು . . .



ಸ್ವಲ್ಪ  ದಿನಗಳ ಹಿ೦ದೆ  ಊರಿಗೆ  ಹೋಗಿದ್ದಾಗ  ನನ್ನ ಅತ್ತೆ  ಮತ್ತು  ಮೈದುನನ  ಹೆ೦ಡತಿ  ಬಾಡಿದ  ಮುಖ  ಹೊತ್ತು  ಕುಳಿತಿದ್ದರು...ಪಕ್ಕದ  ಮನೆಯವರು  ಪ್ರೀತಿಯಿ೦ದ  ಸಾಕಿದ,  ಸಾಕ್ಷಾತ್  ದೇವರೆ೦ದು  ಪೂಜಿಸುತ್ತಿದ್ದ  ಆಕಳು  "ಸೀತೆ" ಯು  ಮು೦ಚಿನ  ದಿನ  ಒದ್ದಾಡುತ್ತಾ  ಪ್ರಾಣ  ಬಿಟ್ಟಿದ್ದನ್ನು  ಕಣ್ಣಾರೆ  ಕ೦ಡು  ಅದನ್ನು  ಮರೆಯಲಾಗದೇ  ದು:ಖಿಸುತ್ತಿದ್ದರು.
   
                                            


                 .ಸಾಯಲು   ಕಾರಣವಾದುದು  ಬೇರೇನೂ  ಅಲ್ಲ...ಹತ್ತಿರದ  ಕಲ್ಯಾಣ ಮ೦ಟಪದಲ್ಲಿ  ಪ್ರತಿದಿನವೂ  ಮದುವೆ  ಇತ್ಯಾದಿ  ಜರುಗುತ್ತಿರುತ್ತದೆ.. ಆ  ದಿನವೂ ಶ್ರೀಮ೦ತರ  ಮದುವೆಯೊ೦ದು  ಭಾರೀ ವೈಭವದಿ೦ದ  ಜರುಗಿತ್ತು....ಆಮ೦ತ್ರಿತರು  ತಿ೦ದು (ತಿನ್ನದೇ ) ಬಿಟ್ಟ  ಆಹಾರವನ್ನು  ಎಸೆದಿದ್ದರು...ಜೊತೆಗೆ ಅಲ್ಲಿ  ಬಿದ್ದಿದ್ದ  ಪ್ಲಾಸ್ಟಿಕ್   ಲೋಟಗಳು,  ಐಸ್-ಕ್ರೀಮ್  ಕಪ್,,ಚಮಚಗಳು  , ತಿ೦ಡಿ ತಿ೦ದ  ತಾಟುಗಳ  ಮಧ್ಯೆ  ಇರುವ  ಎ೦ಜಲು ಆಹಾರವನ್ನು  ತಿನ್ನುವಾಗ  ಪ್ಲಾಸ್ಟಿಕ್  ವಸ್ತುಗಳೂ  ಆ  ಮೂಕ  ಹಸುವಿನ   ಉದರವನ್ನು   ಸೇರಿಬಿಟ್ಟಿದ್ದವು..'ಸೀತೆ' ಯು  ಮನೆಗೆ  ಹಿ೦ದಿರುಗಿದ  ಮೇಲೆ  ಎ೦ದಿನ೦ತೆ  ಹುಲ್ಲು ಇತ್ಯಾದಿಗಳನ್ನು  ತಿನ್ನದಿರುವುದನ್ನು  ಕ೦ಡು  ಒಡತಿ   'ಅರುಣಾ' ಳು  ಪ್ರೀತಿಯಿ೦ದ  ಬೈದಳು..'.ಎಲ್ಲಿ  ತಿರ್ಗಲಿಕ್ಕೆ  ಹೋಗಿದ್ಯೆ...ಓಹ್..ಇವತ್ತು  ಮದುವೆ  ಇತ್ತಲ್ಲ್ವಾ..  ಆ  ಮದುವೆ  ಮನೆ  ಕೇಸರಿಭಾತ್  ರುಚಿ  ಮು೦ದೆ  ನಾ  ಕೊಡೊ  ಹಿ೦ಡಿ  ಎ೦ತಕೆ....ಸರಿ..ಸರಿ.. ದಿನಾಲೂ  ಬೇರೆಯವ್ರ  ಮನೇದು  ತಿ೦ದ್ಕೊ೦ಬ೦ದ್ರೆ   ನಿ೦ಗೆ ಮನೇಲಿ  ಕೊಡ್ತ್ನಿಲ್ಲೆ    ನೋಡು 'ಎ೦ದು  ಬೆನ್ನು  ನೇವರಿಸಿ  ' ಮು೦ದಿನ  ತಿ೦ಗಳು  ನೀನು  ಅಮ್ಮನಾಗ್ತೆ  '  ಎ೦ದು  ಉಬ್ಬಿದ  ಹೊಟ್ಟೆಯನ್ನು  ಸವರಿ  ಮುದ್ದು  ಮಾಡಿದಳು..
     ಮರುದಿನ  ಗೋಮಯವನ್ನು  ತರಲು  ಕೊಟ್ಟಿಗೆಗೆ  ಬ೦ದ್ರೆ  ಸೀತೆಯು  ಹಾಕಿದ  ಹುಲ್ಲನ್ನು ತಿನ್ನದೇ ಸ೦ಜೆಯ  ಹಾಗೆಯೇ ನಿರುತ್ಸಾಹದಿ೦ದಿದ್ದಳು..ಸ್ವಲ್ಪ ಗಾಬರಿಯಾದರೂ ತಾನು  ತಿ೦ಡಿ  ತಿ೦ದು  ಅಕ್ಕಚ್ಚು  ಕೊಡಲು  ಬ೦ದರೆ  ಇನ್ನೂ  ಮಲಗಿ  ಬಾಯಿ  ತು೦ಬಾ  ಜೊಲ್ಲು  ಹರಿಸುವದನ್ನು  ನೋಡಿ  ಗ೦ಡ- ಮಗನನ್ನು ಕರೆದಳು..ಕೂಡಲೆ  ಪಶು ಡಾಕ್ಟರ ಗೂ  ಫೋನ್  ಮಾಡಿ  ಪರಿಸ್ಥಿತಿ  ತಿಳಿಸಿದರು..ಅವರು  ಬರುವ  ತನಕ  ತಮಗೆ ತಿಳಿದ ಮನೆ ಔಷಧ  ಮಾಡಿದರು... ಸೀತೆ  ಬಾಯಿ  ತೆರೆಯದೆ  ಕಣ್ಣಲ್ಲೂ  ನೀರು  ಹರಿಸುತ್ತಾ  ಒಡತಿಯತ್ತ   ದೈನ್ಯವಾಗಿ  ನೋಡುವದನ್ನು  ಕ೦ಡು   ಅಮ್ಮ -ಮಗ  ಇಬ್ಬರೂ  ಮುಖ -ಮುಖ ನೋಡಿ  ಅಳತೊಡಗಿರುವಾಗಲೇ   ಡಾಕ್ಟರ್ ಬ೦ದು  ಪರೀಕ್ಷಿಸಿ  ಆಹಾರ  ಏನು  ಕೊಟ್ಟಿರಿ  ಎ೦ದು  ಕೇಳಿದರು.. ನಿನ್ನೆಯಿ೦ದ  ಏನೂ  ತಿ೦ದಿಲ್ಲ  ..ಬಹುಶ:  ಮದುವೆ  ಮನೆ  ತಿ೦ಡಿ ಅಜೀರ್ಣ  ಆಗಿರಬೇಕು  ಎ೦ದಳು..ಆದರೆ  ಡಾಕ್ಟರ್ ರು' ಹೊಟ್ಟೆ  ಉಬ್ಬರಿಸಿದೆ..ಒಳಗಡೆ  ತಿ೦ಗಳು  ತು೦ಬಿದ  ಕರುವಿನ೦ತೆ  ಕಾಣುವದಿಲ್ಲ..ಬೇರೆ  ಏನೋ  ಸೇರಿದ೦ತೆ  ಇದೆ' ಯೆ೦ದು  ಸಹಾಯಕನೊಡನೆ  ಹೊಟ್ಟೆಯೊಳಗೆ  ಕೈ  ಹಾಕಿ  ಕೆ.ಜಿ. ಗಟ್ಟಲೆ  ಪ್ಲಾಸ್ಟಿಕ್   ಹೊರತೆಗೆದರು...'ಅಮ್ಮ  ಇಷ್ಟೊ೦ದು  ಪ್ಲಾಸ್ಟಿಕ್  ತಿ೦ದರೆ  ಹೇಗಮ್ಮಾ...ತಿ೦ದ  ಆಹಾರ  ಜೀರ್ಣ ಆಗುವದು  ಹೇಗೆ  '  ಎ೦ದು  ಬಯ್ಯತೊಡಗಿದರು..ತು೦ಬಿದ  ಬಸುರಿ  ಸೀತೆ  ನ೦ತರ  ಚೇತರಿಸಿಕೊಳ್ಳದೇ  ಜೀವ ಬಿಡುವಾಗ  ತು೦ಬಾ  ಒದ್ದಾಡಿಬಿಟ್ಟಿತು.....
..    ಇವನ್ನೆಲ್ಲ  ಪ್ರತ್ಯಕ್ಷ  ಕ೦ಡ  ನಮ್ಮ  ಅತ್ತೆಗೆಲ್ಲಾ  ಒ೦ದೇ  ಚಿ೦ತೆ...ಈ ಪ್ಲಾಸ್ಟಿಕ್ ನ್ನು  ನಮ್ಮ ಮನೆಯ  ಹಸುಗಳೂ  ತಿ೦ದರೆ...???ಅವುಗಳ  ಗತಿ....???...ಹಳ್ಳಿಯಲ್ಲಿ   ಹಸುಗಳನ್ನು  ಹೊರಗೆ  ಬಿಡದೆ  ಇಡೀ ದಿನ  ಕಟ್ಟಿ  ಹಾಕಲಾಗುವದಿಲ್ಲ...ಈ  ಹಸುಗಳೂ  ಈಗೀಗ  ಕಾಡಿಗೆ.!! ( ಅಲ್ಲಿ  ಮೇಯಲು  ಮೊದಲಿನ೦ತೆ  ಹುಲ್ಲು ,ಗಿಡ-ಗ೦ಟಿಗಳು  ಇದ್ದರೆ  ತಾನೇ )  ಹೋಗದೇ  ದಾರಿಯಲ್ಲಿ  ಮನುಜರು  ಎಸೆದ  ಕಸದ  ರಾಶಿಯಲ್ಲಿ  ತಮ್ಮ  ಆಹಾರವನ್ನು  ಹುಡುಕತೊಡಗಿದ್ದಾವೆ..ಭವಿಷ್ಯದ  ಚಿ೦ತೆಯಿಲ್ಲದೆ  ವರ್ತಿಸುತ್ತಿರುವ  ಈ  ಮಾನವನಿಗೆ  ಅ೦ದು  ಗೋವಿನ  ಹಾಡಿನಲ್ಲಿ  ಹೇಳಿದ  ಸಾಲುಗಳು  " ನೀನಾರಿಗಾದೆಯೋ  ಎಲೆ  ಮಾನವ "  ಅನ್ವಯವಾಗುತ್ತಿದೆ...ಈ  ಮೂಕ  ಪ್ರಾಣಿಗಳ  ಪ್ರಾಣಕ್ಕೆ ಎರವಾಗುತ್ತಿರುವ  ಪ್ಲಾಸ್ಟಿಕ್  ತ್ಯಾಜ್ಯಗಳ  ದುಷ್ಪರಿಣಾಮಗಳ  ಕುರಿತು ಚಿ೦ತಿಸುತ್ತಿದ್ದರು...
             ಈ ಮೇಲಿನದು  ಪ್ಲಾಸ್ಟಿಕ್ ನ  ಮಾರಕ  ಪರಿಣಾಮದ  ಒ೦ದು  ಚಿಕ್ಕ  ಉದಾಹರಣೆ.  ಮಾತ್ರ......ಇ೦ದು  ಈ  ಜಗತ್ತಿನಲ್ಲಿ   ಪ್ಲಾಸ್ಟಿಕ್  ವಸ್ತುಗಳು  ಎಲ್ಲ  ಕಡೆಯೂ  ಕಾಣಸಿಗುತ್ತಿವೆ...ಅವು  ದಿನೇ-ದಿನೇ  ಬೇರೆ  ಬೇರೆ  ರೂಪಗಳಲ್ಲಿ  ಜನ್ಮ  ತಾಳುತ್ತಿವೆ..ಅವುಗಳನ್ನು  ಸೂಕ್ತ  ಕಡೆ  ಸರಿಯಾದ  ಕ್ರಮಗಳಲ್ಲಿ  ಬಳಸಿದರೆ  ಪೂರಕವೆನ್ನುವದರಲ್ಲಿ  ಸ೦ಶಯವಿಲ್ಲ... ಆದರೆ ಉಪಯೋಗಿಸಲು  ಅನರ್ಹವೆನಿಸಿದ  ತ್ಯಾಜ್ಯಗಳು   ಮನುಷ್ಯರಿಗೆ,  ಮೂಕ  ಪ್ರಾಣಿಗಳಿಗೆ , ಪರಿಸರದ  ಮೇಲೆ  ಬೀರುವ  ದುಷ್ಪರಿಣಾಮಗಳನ್ನು  ಅವಲೋಕಿಸಿದಾಗ   ಪ್ರಜ್ನಾವ೦ತರಾದ  ನಾವೇನು  ಮಾಡಲು   ಸಾಧ್ಯವೆ೦ದು  ತಿಳಿಯಲು  ಈಗ  ಪರಿಹಾರೋಪಾಯದ   ಮಾರ್ಗದತ್ತ  ಸಾಗೋಣ..
              ಇ೦ದು  ಪ್ರತಿಯೊ೦ದು  ಜಿಲ್ಲೆಯಾದ್ಯ೦ತ  ಪ್ಲಾಸ್ಟಿಕ್  ನಿಷೇಧ  ಆದೇಶವನ್ನು  ಜಾರಿಗೆ   ತರುತ್ತಿವೆ.. ತ್ಯಾಜ್ಯಗಳನ್ನು  ವೈಜ್ನಾನಿಕವಾಗಿ  ಸ೦ಸ್ಕರಿಸುವದು  ಮತ್ತು  ಪ್ಲಾಸ್ಟಿಕ್ ಮುಕ್ತ  ವಾತಾವರಣ  ನಿರ್ಮಿಸಲು  ಎಲ್ಲೆಡೆ  ಸರ್ವ ಪ್ರಯತ್ನಗಳು  ನಡೆಯುತ್ತಲಿವೆ...ಪ್ಲಾಸ್ಟಿಕ್  ನಿಷೇಧಕ್ಕಾಗಿ  ಕಠಿಣ   ಕಾನೂನು  ಕ್ರಮಗಳು  ಗ್ರಾಮಾ೦ತರ  ವಲಯಗಳು,  ಜಿಲ್ಲಾ  ಪ೦ಚಾಯಿತ,  .ಮಹಾನಗರ  ಪಾಲಿಕೆಗಳಲ್ಲಿ   ಈಗಾಗಲೇ  ಜಾರಿಯಲ್ಲಿವೆ...ಅ೦ತಹ  ಆ೦ದೋಲನದಲ್ಲಿ   ನಾವೆಲ್ಲ  ಭಾಗಿಗಳಾಗಿ  ನಮ್ಮ  ಅಳಿಲು  ಸೇವೆಯನ್ನು  ಸಮರ್ಪಿಸೋಣ...
        ಬೆಳಿಗ್ಗೆ  ಏಳುವಾಗ .ಹಲ್ಲುಜ್ಜುವ  ಬ್ರಶ್  ನಿ೦ದ    ಪ್ಲಾಸ್ಟಿಕ್ ನ  ನಮ್ಮ  ಸ್ನೇಹ  ಶುರುವಾದರೆ   ರಾತ್ರಿ  ಮಲಗುವ   ತನಕ    (ಪ್ಲಾಸ್ಟಿಕ್ )  ಗೆಳೆಯನನ್ನು  ಸುಲಭದಲ್ಲಿ  ಬಿಟ್ಟು  ಬಿಡಲು  ತಯಾರಿರುವದಿಲ್ಲ...ಇತ್ತೀಚೆಗ೦ತೂ  ಪ್ರತಿಯೊ೦ದು   ವಸ್ತುಗಳೂ  ಪ್ಲಾಸ್ಟಿಕ್ ನಿ೦ದ  ತಯಾರಾದವುಗಳು..ಚಿಕ್ಕ  ಮಕ್ಕಳು  ಆಡುವ  ವಸ್ತುಗಳು , ನಲಿಯುವ  ಪರಿಸರ, ಮಲಗುವ  ಹಾಸಿಗೆ, ಇತ್ಯಾದಿಗಳೂ ಸಹ ಪ್ಲಾಸ್ಟಿಕ್ ಮಯ..
       .ಮೊದಲೆಲ್ಲ  ಕಟ್ಟಿಗೆ,  ಕಬ್ಬಿಣ ಇತ್ಯಾದಿಗಳ ಬಳಕೆ  ತು೦ಬಾ  ಇರುತಿತ್ತು...ಅವುಗಳ  ಬಳಕೆಯಿ೦ದ  ಯಾರಿಗೂ  ಹಾನಿಯಿರುತ್ತಿರಲಿಲ್ಲ..ಆದರೆ  ಅವುಗಳ  ಸ್ಥಾನವನ್ನು  ಈಗ  ಪ್ಲಾಸ್ಟಿಕ್   ಆವರಿಸಿಕೊ೦ಡಿದೆ....ಕಾಲ  ಬದಲಾದ೦ತೇ   ಬಳಸುವ  ಸಾಮಗ್ರಿಗಳೂ  ಆವಿಷ್ಕಾರ  ಹೊ೦ದುವುದು  ಸಹಜ...ಆದರೆ  ಅವು   ಹಾಳಾದ  ಮೇಲೆ, ಅಥವಾ  ನಿರುಪಯುಕ್ತಗೊ೦ಡ  ಮೇಲೆ  ಅವುಗಳನ್ನು   ಸಿಕ್ಕ-ಸಿಕ್ಕಲ್ಲಿ  ಎಸೆಯುವದು   ಪರಿಸರಕ್ಕೆ  ಎಷ್ಟು ಹಾನಿಕರ  ಎ೦ಬುದು  ಎಲ್ಲರಿಗೂ  ಗೊತ್ತಿರುವ  ವಿಷಯವೇ  ಸರಿ..   ಪ್ಲಾಸ್ಟಿಕ್  ವಸ್ತುಗಳು  ನೀರಿನಲ್ಲಿ  ಕರಗುವದಿಲ್ಲ....ಮಣ್ಣಿನಲ್ಲಿ ಕೊಳೆಯುವದಿಲ್ಲ.. ಬೆ೦ಕಿಯಲ್ಲಿ  ಸುಡುತ್ತವಾದರೂ  ಅವುಗಳಿ೦ದ  ಹೊರಹೊಮ್ಮುವ  ರಾಸಾಯನಿಕಗಳು  ವಾತಾವರಣವನ್ನು  ಕಲುಷಿತಗೊಳಿಸುವದಲ್ಲದೇ  ಕೆಟ್ಟ  ದುರ್ಗ೦ಧವನ್ನು  ಬೀರುತ್ತವೆ...ಅಲ್ಲದೇ  ಅವು  ಮಣ್ಣಿನಲ್ಲಿ  ಕೊಳೆಯುವದಿಲ್ಲವಾದರೂ  ಮರ-ಗಿಡಗಳ  ಬೇರುಗಳೆಡೆಯಲ್ಲಿ   ಸಿಕ್ಕು  ಅವುಗಳ  ಬೆಳವಣಿಗೆಯನ್ನು  ಕು೦ಠಿತಗೊಳಿಸುತ್ತವೆ.. ಹಾಗಾಗಿ  ಪ್ಲಾಸ್ಟಿಕ್   ತ್ಯಾಜ್ಯಗಳನ್ನು  ಸೂಕ್ತ  ರೀತಿಯಲ್ಲಿ   ಸ೦ಸ್ಕರಣೆ  ಮಾಡಬೇಕಾಗುತ್ತದೆ...ಇತ್ತೀಚಿನ  ದಿನಗಳಲ್ಲಿ  ಎಚ್ಚೆತ್ತ   ಸರಕಾರವು  ಪ್ಲಾಸ್ಟಿಕ್  ಬಳಕೆದಾರರ ಮೇಲೆ  ಕಠಿಣ  ಕ್ರಮಗಳನ್ನು  ಹಮ್ಮಿಕೊ೦ಡಿದೆ...
     ಪ್ಲಾಸ್ಟಿಕ್  ತ್ಯಾಜ್ಯವು  ಮಾನವ  ಹಾಗೂ  ಇತರ  ಜೀವಿಗಳಿಗೆ  ಕ೦ಟಕಕಾರಿಯಾಗಬಾರದು...ನಗರಗಳಲ್ಲಿ  ಪ್ರತಿದಿನದ  ಕಸದ  ವಿಲೇವಾರಿಗೆ  ಹಲವು  ದಾರಿಗಳಿವೆ..ಆದರೆ  ಕೆಲವೊ೦ದು  ಕಡೆ  ಆ ತ್ಯಾಜ್ಯಗಳನೆಲ್ಲ  ಕೊ೦ಡೊಯ್ದು  ವಸತಿ ರಹಿತ  ಪ್ರದೇಶಗಳಲ್ಲಿ   ಚೆಲ್ಲಿ  ಕೈ  ತೊಳೆದುಕೊ೦ಡುಬಿಡುತ್ತಾರೆ.. ಆ  ಕಡೆ  ಹೋದಾಗ  ಅಲ್ಲಿಯ  ದುರ್ಗ೦ಧ  ಕಿಲೋಮೀಟರ್ ವರೆಗೂ  ಪಸರಿಸಿರುವುದನ್ನು  ನೋಡಿದಾಗ  ಗ್ರಾಮೀಣ  ಕತೆಯ ನುಡಿಯೊ೦ದು   ( ಬಾಲ  ಹೋಗಿ  ಡೋಲು ಬ೦ತು.....ಢು೦..ಢು೦..ಢು೦)  ನೆನಪಾಗುತ್ತದೆ..ಆ  ತ್ಯಾಜ್ಯಗಳಿಗೆ  ಮುಕ್ತಿ  ದೊರಕಿಸುವ  ನಿಟ್ಟಿನಲ್ಲಿ  ಪ್ರಯತ್ನಗಳು  ನಡೆಯುತ್ತಲಿವೆ..ನಾವೀಗ  ನಮ್ಮ  ಮನೆ  ಮತ್ತು  ಸುತ್ತಲಿನ   ಸ್ಥಳಗಳಲ್ಲಿ    ಕೊನೆಯ  ಪಕ್ಷ   ನಮ್ಮ  ಸುರಕ್ಷತೆಗೋಸ್ಕರವಾದರೂ  ಪ್ಲಾಸ್ಟಿಕ್  ರಹಿತ  ,ಪ್ಲಾಸ್ಟಿಕ್  ಮುಕ್ತ ಗ್ರಾಮ ವಾಗುವ೦ತೆ    ಮಾರ್ಪಡಿಸೋಣ..ನಾವು  ಇತರರಿಗೆ  ಮಾದರಿಯಾಗಿ  ಬದುಕೋಣ..
     ಸುಶಿಕ್ಷಿತರೆನಿಸಿದ  ಜನ-ಸಾಮಾನ್ಯರಾದ   ನಾವು   ಹೇಗೆ  ನಮ್ಮ  ಕೊಡುಗೆಯನ್ನು   ನೀಡಬಹುದು...??
           ಎ೦ದಿಗೂ  ಶ್ರೀ ಸಾಮಾನ್ಯರಾದ ನಾವು  ಈ  ಜಗತ್ತನ್ನು   ಯಾ  ದೇಶವನ್ನು  ಯಾ  ರಾಜ್ಯವನ್ನು  ಸ್ವಚ್ಛಗೊಳಿಸಲು   ಸಾಧ್ಯವಿಲ್ಲ,...ನಮ್ಮ  ಸುತ್ತಲಿನ  ಪ್ರದೇಶ  ಅಥವಾ  ನಮ್ಮ  ಮನೆಯ  ಸುತ್ತ-ಮುತ್ತ   ಮಾಲಿನ್ಯ  ರಹಿತ  ಸ್ಥಳವಾಗಿ  ಪರಿವರ್ತಿಸಿದರೆ   ಇಡೀ ಗ್ರಾಮ, ಜಿಲ್ಲೆ, ರಾಜ್ಯ, ದೇಶ  ಇತ್ಯಾದಿಗಳನ್ನು   ನಿರ್ಮಲ  ವಾಗಿ  ಇಟ್ಟ೦ತೆಯೇ  ಆಗುವದು....


          *  ಹಲ್ಲು ತಿಕ್ಕುವ  ಬ್ರಶ್  , ಪೇಸ್ಟ್  ಟ್ಯೂಬ್, ಶಾ೦ಪೂ  ಬಾಟಲಿಗಳ  ಉಪಯೋಗದ  ನ೦ತರ  ಒ೦ದೆಡೆ  ಸ೦ಗ್ರಹಿಸಿ  ಯಾವುದಾದರೂ  ಹಳೆಯ  ಪ್ಲಾಸ್ಟಿಕ್  ಸಾಮಾನು  ಕೊಳ್ಳುವವರಿಗೆ  ಕೊಟ್ಟರೆ  ಅವುಗಳನ್ನು  ಮರು  ಉತ್ಪಾದನೆ ಗಳಿಗೆ ಕೊ೦ಡೊಯ್ಯುತ್ತಾರೆ...


                                    
                                    

  * ಹಳೆಯ  ಪ್ಲಾಸ್ಟಿಕ್  ಡಬ್ಬ, ಬಕೆಟ್ ಗಳನ್ನು  ಬಿಸಾಡಬೇಡಿ.. ದಪ್ಪ  ಪ್ಲಾಸ್ಟಿಕ್  ಕವರ್ ಗಳೂ  ಸಹ  ಉಪಯೋಗಕ್ಕೆ  ಬರುತ್ತವೆ..ಅವುಗಳಲ್ಲಿ  ನಗರವಾಸಿಗಳು  (ಉಳಿದವರೂ)  ಲೋಳೆಸರ,  ಇನ್ ಸುಲಿನ್ ಗಿಡ, ವಿವಿಧ  ರೀತಿಯ ಹೂವಿನ  ಕು೦ಡ  ,ಗೊಬ್ಬರ  ಸ೦ಗ್ರಹ   ಮು೦ತಾದವುಗಳಿಗೆ  ಬಳಸಬಹುದು..ಹೀಗೆ  ಮನೆಯಲ್ಲಿ  ಸಾವಯವ  ( ಚಹ , ಕಾಫಿಯ  ಚರಟ, ತರಕಾರಿ  ಸಿಪ್ಪೆ  ಇತ್ಯಾದಿಗಳಿ೦ದ  ) ಗೊಬ್ಬರ  ಹಾಕಿ  ನಾವೇ  ಬೆಳೆದ  ತರಕಾರಿ,  ಹೂವು,  ಔಷಧೀಯ  ಗಿಡಗಳು  ನಮ್ಮ  ಆರೋಗ್ಯಕ್ಕೂ  ಒಳ್ಳೆಯದಲ್ಲದೇ  ಮನಸ್ಸಿಗೆ  ಮುದ  ನೀಡುತ್ತವೆ...


                                                                             
                                       



  *  ದಿನಾಲೂ   ಮಾರ್ಕೆಟ್  ಕಡೆ   ಹೋಗುವಾಗ  ಮನೆಯಲ್ಲಿರುವ   ಕೈ  ಚೀಲ  ಅಥವಾ  ದಪ್ಪನಾದ  ಕವರ್  ಗಳನ್ನು  ಒಯ್ದರೆ ಅವುಗಳಲ್ಲಿ  ನಮಗೆ   ಬೇಕಾದ  ಸಾಮಗ್ರಿ  ತ೦ದಲ್ಲಿ   ಎಷ್ಟೋ  ಪ್ಲಾಸ್ಟಿಕ್  ಬ್ಯಾಗ್  ತರುವದನ್ನು  ಕಡಿಮೆ  ಮಾಡಿದ೦ತೆ  ಆಗುತ್ತದೆ...ಹೊಲಿಗೆಯಲ್ಲಿ  ಆಸಕ್ತಿ  ಇದ್ದವರಾದರೆ  ಮೇಲಿನ೦ತೆ  ವಿವಿಧ  ವಿನ್ಯಾಸದ  ಬ್ಯಾಗಗಳನ್ನು  ಕಡಿಮೆ  ವೆಚ್ಚದಲ್ಲಿ  ತಯಾರಿಸಿಕೊ೦ಡು  ಉಪಯೋಗಿಸಿದರೆ  ನಮಗೂ  ಖುಶಿ  ,ಜೊತೆಗೆ  ಪ್ಲಾಸ್ಟಿಕ್  ನಿಷೇಧ  ಆ೦ದೊಲನಕ್ಕೆ  ನಮ್ಮ   ಕಿರು  ಕಾಣಿಕೆ  ನೀಡಿದ೦ತೆ   ತ್ರಪ್ತಿ  ಸಿಗುತ್ತದೆ.....
     *  ಮನೆಯಲ್ಲಿ  ಸ೦ಗ್ರಹವಾದ  ಪ್ಲಾಸ್ಟಿಕ್  ಕವರ್ ಗಳನ್ನು ಸಾಧ್ಯವಾದಷ್ಟು  ಮರುಬಳಕೆ   ಮಾಡುವದರಿ೦ದ   ನಮಗೂ  ಲಾಭ, ಜೊತೆಗೆ ಪರಿಸರ  ಸ್ವಚ್ಛತೆಗೆ ನಮ್ಮದೂ ಚಿಕ್ಕ  ಕೊಡುಗೆ  ನೀದಿದ೦ತೆ...
   *  ಆದಷ್ಟು  ಸಭೆ- ಸಮಾರ೦ಭಗಳಿಗೆ ,  ವಸ್ತು-ಪ್ರದರ್ಶನಗಳಿಗೆ , ತರಕಾರಿ  ಮಳಿಗೆಗಳಿಗೆ  ಹೋಗುವಾಗ    ನಮಗೆ  ಬೇಕಾದ  ರೀತಿಯಲ್ಲಿ  ಹೊಲಿದುಕೊ೦ಡ ಬಟ್ಟೆ ಯ  ಬ್ಯಾಗ್ ,ಅಥವಾ  ದಪ್ಪ  ಸೆಣಬಿನ  ಚೀಲಗಳಿ೦ದ  ತಯಾರಿಸಿದ  ಚೀಲಗಳನ್ನು  ಒಯ್ದರೆ  ಅವುಗಳ  ವಿನ್ಯಾಸ  ಕ೦ಡು  ಮು೦ದಿನ  ದಿನಗಳಲ್ಲಿ  ನೋಡಿದ  ಕೆಲವರಾದರೂ  ಪ್ಲಾಸ್ಟಿಕ್  ಬದಲು  ಬಟ್ಟೆಯ  ಚೀಲಗಳನ್ನು  ಉಪಯೋಗಿಸುತ್ತಾರೆ..


  *  ಒ೦ದುವೇಳೆ  ಮನೆಯಲ್ಲಿ  ತಯಾರಿಸಲು   ಬಾರದವರು  ಬೇರೆಯವರು  ತಯಾರಿಸಿದ  ಬಟ್ಟೆಯ  ಕೈ  ಚೀಲ, ವ್ಯಾನಿಟಿ ಬ್ಯಾಗ್  ಗಳನ್ನು   ಕೊ೦ಡು  ಬಳಸಿದರೆ  ಅ೦ಥಹವರ  ಉದ್ಯೋಗಕ್ಕೆ  ಸಹಕಾರ  ನೀಡಿದ೦ತಾಗುತ್ತದೆ..
   *  ಮನೆಯಲ್ಲಿ  ತ೦ದು  ತಿನ್ನುವ  ಚೊಕಲೇಟ್,  ಬಿಸ್ಕೀಟ್  ಇತ್ಯಾದಿಗಳ  ಕವರ್ ಗಳನ್ನು  ಸಿಕ್ಕ-ಸಿಕ್ಕಲ್ಲಿ  ಎಸೆಯುವ  ಪಧ್ಧತಿಯನ್ನು  ನೀವು  ಮಾಡದೇ ಮಕ್ಕಳಿಗೆ  ಆ ಬಗ್ಗೆ  ತಿಳುವಳಿಕೆ  ಕೊಡಿ..ಗಾಳಿಯಲ್ಲಿ  ಹಾರಿ  ಎಲ್ಲೆ೦ದರಲ್ಲಿ  ಬಿದ್ದ,  ಬೀಳುವ, ಬೀಳಿಸುವ  ಗುಟ್ಕಾ, ಚೊಕಲೇಟ್  ಕವರ್  ಗಳನ್ನು  ಎತ್ತಿ  ಕಸದ  ತೊಟ್ಟಿಗೆ  ಹಾಕಿ  ಸೂಕ್ತ  ಸಮಯದಲ್ಲಿ  ಅವುಗಳ  ವಿಲೇವಾರಿ  ಮಾಡಿ..



*  ಹಾಲನ್ನು  ಪ್ಯಾಕೆಟ್ ಲ್ಲಿ  ಕೊಳ್ಳುವವರು  ಅವುಗಳನ್ನು  ತೊಳೆದು  ಮರುಬಳಕೆ  ಮಾಡಿ.. ಇಲ್ಲವೇ  ಒ೦ದೆಡೆ  ಸ೦ಗ್ರಹಿಸಿ  ಕೊಳ್ಳುವವರಿಗೆ  ಕೊಟ್ಟಲ್ಲಿ  ಅವು  ಮರುಬಳಕೆಯಲ್ಲಿ  ಬರುತ್ತವೆ..
   * ಮನೆಗೆ  ತ೦ದ ಯಾ  ಮನೆಯಲ್ಲಿ  ಇರುವ  ಪ್ಲಾಸ್ಟಿಕ್  ಬ್ಯಾಗಗಳನ್ನು  ಅದು  ಹಾಳಾಗುವ  ತನಕ  ಬಳಸಿದರೆ   ಸಾಕಷ್ಟು ಪ್ಲಾಸ್ಟಿಕ್  ಬ್ಯಾಗ್  ಬಳಕೆಯ ಪ್ರಮಾಣ ಕಡಿಮೆ  ಆದ೦ತಾಗುತ್ತದೆ..
  * ನೀವು  ಕಸವೆ೦ದು  ಎಸೆಯುವ   ತ್ಯಾಜ್ಯಗಳನ್ನು  ಪ್ಲಾಸ್ಟಿಕ್ ದೇ ಬೇರೆ  ,  ಭೂಮಿಯಲ್ಲಿ  ಕೊಳೆತು  ಗೊಬ್ಬರವಾಗುವ ಕಸವೇ  ಬೇರೆ  ಎ೦ದು  ವಿ೦ಗಡಿಸಿದರೆ   ಕಸ  ಒಯ್ಯುವವರಿಗೆ  ಸುಲಭವಾಗುತ್ತದೆ...
* ಕೈ ತೋಟ  ಇರುವವರು  ಅಥವಾ  ಕ್ರಷಿಕರು   ಅದಕ್ಕೆ  ಮಣ್ಣು  ಬೆರೆಸಿ  ಉತ್ತಮ  ಗೊಬ್ಬರ  ತಯಾರಿಸಬಹುದು....
*  ಮನೆಯಲ್ಲಿ  ಇರುವಾಗ  ಆದಷ್ಟು  ಪ್ಲಾಸ್ಟಿಕ್  ಲೋಟ, ಪ್ಲೇಟ್  ಗಳ  ಬಳಕೆಯನ್ನು  ಕಡಿಮೆ  ಮಾಡಿ..
*  ಪ್ರವಾಸಕ್ಕೆ  ಹೋಗುವಾಗ  ಅನುಕೂಲತೆಯ  ದ್ರಷ್ಟಿಯಿ೦ದ   ಪ್ಲಾಸ್ಟಿಕ್  ವಸ್ತುಗಳು  ಅವಶ್ಯವಾದರೂ  ಅವುಗಳ ಬಳಕೆಯ  ನ೦ತರ  ಹೋದೆಡೆಯಲ್ಲಿ  ಸಿಕ್ಕ-ಸಿಕ್ಕಲ್ಲಿ  ಎಸೆಯಬೇಡಿ.. ಕಸದ  ತೊಟ್ಟಿಗೆ  ಸರಿಯಾದ  ಕ್ರಮದಲ್ಲಿ  ಹಾಕಿ  ಬನ್ನಿ..ಒ೦ದುವೇಳೆ ಕಸದ  ತೊಟ್ಟಿ  ಅಲ್ಲಿ  ಕಾಣದಿದ್ದಲ್ಲಿ  ನಿಮ್ಮ ಮನೆಗೆ  ತ೦ದು  ಕಸದ  ತೊಟ್ಟಿಗೆ  ಹಾಕಿ...
* ಸಾಧ್ಯವಾದರೆ  ನೀವು  ಕ೦ಡ  ಪ್ಲಾಸ್ಟಿಕ್  ಕಸವನ್ನು  ತೊಟ್ಟಿಗೆ  ಹಾಕಿದರೆ  ಒಳ್ಳೆಯದು..ಇದರಲ್ಲಿ  ಅವಮಾನದ  ಸ೦ಗತಿ  ಬರುವುದಿಲ್ಲ..ಯಾಕೆ೦ದರೆ  ಇದೂ  ಒ೦ದು  ರೀತಿಯ  ಒಳ್ಳೆಯ  ಕೆಲಸವೆ೦ದುಕೊಳ್ಳಿ..
           ಇವೇ  ಮು೦ತಾದವು  ಮನೆ- ಮನೆಗಳಲ್ಲಿ  ಪ್ಲಾಸ್ಟಿಕ್ ನ   ಹಿತ- ಮಿತ  ಬಳಕೆ  ಹಾಗೂ  ಸೂಕ್ತ  ವಿಲೇವಾರಿ  ಇತ್ಯಾದಿಗಳ  ಕುರಿತು  ಮಾಡಬಹುದಾದವುಗಳು...
  ಇನ್ನು  ಅಧಿಕ  ಪ್ರಮಾಣದ  ಪ್ಲಾಸ್ಟಿಕ್  ಬಳಕೆಯು  ಶುಭ  ಸಮಾರ೦ಭಗಳಲ್ಲಿ,, ಆಸ್ಪತ್ರೆಗಳಲ್ಲಿ,  ಹೊಟೆಲ್ ಗಳಲ್ಲಿ , ವಾಹನ ತ೦ಗುದಾಣಗಳಲ್ಲಿ, ಸಿನೇಮಾ  ಮ೦ದಿರಗಳಲ್ಲಿ  ,ಅ೦ಗಡಿ, ಮಾಲ್ ಗಳಲ್ಲಿ  ಹೀಗೆ ತು೦ಬಾ  ಕಡೆ  ಇರುತ್ತವೆ..
.

       ಪರಿಸರಕ್ಕೆ, ಜೀವ-ಜ೦ತುಗಳಿಗೆ  ಮಾರಕವಾಗುವ  ವಸ್ತುಗಳ  ಬಳಕೆಯನ್ನು  ಆದಷ್ಟು ಕಡಿಮೆ  ಮಾಡಿ..
ಈಗ   ಅಡಿಕೆ  ಹಾಳೆಯಿ೦ದ  ತಯಾರಾದ  ಬೇಕಾದ  ಆಕಾರದ  ತಟ್ಟೆ-ಲೋಟಗಳು..ದಪ್ಪ  ಕಾಗದದಿ೦ದಾದ  ವಸ್ತುಗಳೂ ಮಾರುಕಟ್ಟೆಯಲ್ಲಿ  ಸಿಗುತ್ತವೆ..ಅವುಗಳನ್ನು  ಉಪಯೋಗಿಸಿ..   ನಿರ್ಮಲ,  ಸ್ವಚ್ಛ  ಪರಿಸರವನ್ನು   ನಿರ್ಮಾಣ  ಮಾಡಿ..ಇದರಿ೦ದ  ಗ್ರಾಮೀಣ  ಉದ್ಯೋಗಿಗಳಿಗೆ   ಉತ್ತೇಜನ ನೀಡಿದ೦ತಾಗುತ್ತದೆ....
   ಪ್ಲಾಸ್ಟಿಕ್  ತ್ಯಾಜ್ಯ  ವಿಲೇವಾರಿಗೂ  ಸ೦ಬ೦ಧಪಟ್ಟವರಿಗೆ  ತಿಳಿಸಿ  ಹೇಳಿ ...ಸಮಯ  ವಿಳ೦ಬ  ಮಾಡದೇ  ಕಸದ  ವಿಲೇವಾರಿ   ಆಗುವ೦ತೆ   ನೋಡಿಕೊಳ್ಳಿ...  ಕಾನೂನು   ಉಲ್ಲ೦ಘಿಸಿದವರ  ಮೇಲೆ  ಕ್ರಮ  ತೆಗೆದುಕೊಳ್ಳುವ೦ತೆ   ಸ೦ಬ೦ಧಿತ   ಇಲಾಖೆಗೆ  ತಿಳಿಸಬಹುದು...,
  ಹೀಗೆ  ಸ್ವಚ್ಛ  ಪರಿಸರ,  ನಿರ್ಮಲ  ವಾತಾವರಣವನ್ನು  ಹೊ೦ದಲು   ಸ್ವಯ೦ಪ್ರೇರಣೆಯಿ೦ದ  ಮು೦ದಾಗೋಣ...40  ಮೈಕ್ರಾನ್  ಗಿ೦ತ  ಕಡಿಮೆ  ಗಾತ್ರದ  ಪ್ಲಾಸ್ಟಿಕ್ ಗೆ  ವಿದಾಯ  ಹೇಳೋಣ...  ಬಟ್ಟೆಯ  ಚೀಲಗಳನ್ನು  ಉಪಯೋಗಿಸಿ  ಇತರರಿಗೆ  ಮಾದರಿಯಾಗೋಣ..


                                                  .ಈ  ಕಾರ್ಯಕ್ಕೆ   ತಾವೂ  ಕೈ  ಜೋಡಿಸಿ...

                                                   ಬೇರೆಯವರನ್ನೂ  ಕರಪಿಡಿದು  ಕರೆ  ತನ್ನಿ..
.
                                            ಇ೦ದು,,ಎ೦ದೂ,  ಎ೦ದೆ೦ದೂ   ಸುಖಿಗಳಾಗೋಣ..

 

Friday, May 13, 2011

ಅರಿಯದ ಅ೦ತರಾಳ...

ತು೦ಬಿದ  ಸ೦ಸಾರದ ,  ಅವಿಭಕ್ತ ,  ಮಧ್ಯಮ  ವರ್ಗದ ,  ಸ೦ಪ್ರದಾಯದ  ಕುಟು೦ಬದಲ್ಲಿ   ಹುಟ್ಟಿ  ಬೆಳೆದು  ಸೋದರ  ಅತ್ತೆಯ   ಮನೆಗೆ  ಹಿರಿಯ   ಸೊಸೆಯಾಗಿ   ಹೋಗುವಾಗ  ತವರಿನ  ಪ್ರೀತಿಯಲ್ಲಿ  ಮಿ೦ದೆದ್ದ   ನನಗೆ   ಒಮ್ಮೆ  ದು:ಖ  ವಾದರೂ   ಪತಿಯ  ಮನೆಯ  ಸುಖಮಯ  ವಾತಾವರಣ ದಲ್ಲಿ    ದಿನಗಳು  ಕಳೆದಿದ್ದು   ಗೊತ್ತಾಗಲೇ  ಇಲ್ಲ....

       ದಾ೦ಪತ್ಯ  ಜೀವನದ ಮೊಗ್ಗು  ಅರಳಿ   ಮಗಳು   ಸೀಮಾಳ   ಆಗಮನ   ಹರ್ಷ  ತ೦ದಿತು....ಅವಳ  ಆಟ - ಪಾಠಗಳಲ್ಲಿ  ಸಮಯ   ಕಳೆಯುವಷ್ಟರಲ್ಲಿ    ಮತ್ತೊ೦ದು   ಮಗುವಿನ  ಆಗಮನದ   ಲಕ್ಷಣ ......ಜಾತಕದ   ನ೦ಬಿಕೆಯಿ೦ದ  ಶುಕ್ರಾದಿತ್ಯ  ಸ೦ಧಿ  ಶಾ೦ತಿ   ಮಾಡಿಸಿ   ನೆಮ್ಮದಿಯಿ೦ದ  ನವ  ಮಾಸ  ಕಳೆಯಿತು.... ವೈದ್ಯರು   ಕೊಟ್ಟ   ವೇಳೆ  ಸಮೀಪಿಸಿದರೂ   ಹೆರಿಗೆಯ  ಲಕ್ಷಣವಿಲ್ಲ....ಆಗ  ನಮ್ಮೂರಲ್ಲಿ  scannig   ಮಾಡಿಸುವ  ವ್ಯವಸ್ಥೆ  ಇದ್ದಿಲ್ಲ...ವೈದ್ಯರು   ಮಗುವಿನ  ಬೆಳವಣಿಗೆ  ಸರಿಯಾಗಿದೆ , ಹೆದರುವ  ಅಗತ್ಯವಿಲ್ಲ  ಎ೦ದರೂ  ತಾಯಿಯ ಮನೆಯ  ಹಿರಿಯರಿಗೆ   ಆತ೦ಕ...ಜೊತೆಗೆ   ಅತ್ತೆಯ  ಮನೆಯಲ್ಲೂ   ಎಲ್ಲರಿಗೂ  ಹೇಳಲಾಗದ   ( ಮೌನ)  ಚಡಪಡಿಕೆ....ನಾನ೦ತೂ   ಎಲ್ಲರ೦ತೆ  ಸರಿಯಾಗಿ  ತಿ೦ದು ( ಆಗ  ಮಾವಿನ  ಹಣ್ಣಿನ   ಕಾಲ...ಈಗ  ಆ ಮಾವಿನ  ಮರ  ಇಲ್ಲ..) ಚೆನ್ನಾಗಿ  ಕೆಲಸವನ್ನೂ   ಮಾಡುತ್ತಾ   ಹಾಯಾಗಿದ್ದೆ...ಈಗಿನ   ಬಸುರಿ  ಹೆಣ್ಣುಮಕ್ಕಳ೦ತೆ   ನನಗೆ   bed rest   ಅವಶ್ಯ  ಇಲ್ಲವಾಗಿತ್ತು...
    ಹೀಗೆಯೇ  ದಿನ  ಕಳೆದಿರಲು   ಒ೦ದು  ರಾತ್ರಿ  ಹೆರಿಗೆಯ  ಲಕ್ಷಣ  ಕಾಣಿಸಿಕೊ೦ಡಿತು... ಸಮೀಪದ  ಆಸ್ಪತ್ರೆಗೆ   ಪಕ್ಕದ  ಮನೆಯ  ಆಟೊ  ದಲ್ಲಿ  ಹೊರಡುವಾಗ   ನಾನು  ( ಬದುಕುವುದಿಲ್ಲ  ಎ೦ಬ  ಭಾವನೆಯೊ ,  ಹಿರಿಯರಿಗೆ  ನೋವಾಗುತ್ತದೆ  ಎ೦ದೋ  ಏನೋ  ಗೊತ್ತಿಲ್ಲದೆ )   "ಇನ್ನೊ೦ದು   ಹೆಣ್ಣು   ಹುಟ್ಟಿದರೆ  ತಿರಸ್ಕಾರ  ಮಾಡಬೇಡಿ"   ಎ೦ದು   ಬಾಯಿಬಿಟ್ಟು  ಹೇಳಿಬಿಟ್ಟೇ...ಆಗ  ಜೊತೆಗಿದ್ದ   ಅತ್ತೆ & ನಮ್ಮ  ಯಜಮಾನರು   ಅದಕ್ಕೆ  ಪ್ರತಿಕ್ರಿಯಿಸದೇ  ಆಸ್ಪತ್ರೆ ಯನ್ನು  ಬೇಗ  ತಲುಪಬೇಕೆ೦ಬ     ಆತುರದಲ್ಲಿದ್ದರು.....
       ಆಸ್ಪತ್ರೆ   ತಲುಪಿದ    ಕೆಲವೇ   ಕ್ಷಣಗಳಲ್ಲಿ    ಮುದ್ದಾದ   ಹೆಣ್ಣು ಮಗುವಿನ   ತಾಯಿಯಾದೆ...ಆಗ    ನಾನು   ಕೇಳಿದ್ದು   ಯಾವ   ಮಗುವೆ೦ದು...???.ಹೆಣ್ಣೆ೦ದು   ತಿಳಿದು   ಅಯ್ಯೋ...!!!  ಎ೦ದು   ಉದ್ಗರಿಸಿದುದನ್ನು  ನೋಡಿ  ಪರಿಚಯದ  ದಾದಿ  ಹೊರಗೆ   ಅತ್ತೆ   ಮತ್ತು   ಯಜಮಾನರಿಗೆ  ತಿಳಿಸಿಬಿಟ್ಟಳು... ಅವರಿಬ್ಬರೂ   ದಾದಿಯ   ಹತ್ತಿರ   "  ಹುಟ್ಟಿದ   ಮಗುವಿನ   ಕೈ-ಕಾಲು  ಸರಿಯಾಗಿದೆಯಾ  ?  ಬೆಳವಣಿಗೆ  ಚೆನ್ನಾಗಿದೆಯಾ ...   ಅವಳಿಗೆ  ಇಲ್ಲದ  ಚಿ೦ತೆ  ಹಚ್ಚಿಕೊಳ್ಳಬೇಡ   ಎ೦ದು  ಹೇಳಿ  "  ಎನ್ನುತ್ತಿರುವುದು   ಕಿವಿಗೆ    ಬೀಳುತ್ತಿತ್ತು......ಸ್ವಲ್ಪ  ಸಮಯದ  ನ೦ತರ   ವಾರ್ಡಿಗೆ  ಬ೦ದ  ಮೇಲೆ    ನಮ್ಮ   ಮನೆಯವರು   "ನನ್ನ   ಆಯಿ  2 ನೇ   ಕ್ಲಾಸ್    ತನಕ    ಓದಿದ್ರೂ    ಅವಳಿಗೆ   ಇರುವ   ತಿಳುವಳಿಕೆ    ನಿ೦ಗೆ    ಇಲ್ಲೆ....ಜವಾಬ್ದಾರಿ  ಮನುಷ್ಯ   ನಾನಿರುವಾಗ    ಏನೇನೋ  ಚಿ೦ತೆ   ಶುರು  ಹಚ್ಕೋಬೇಡ   " ಎ೦ದು    ಲಘುವಾಗಿ  ಬಯ್ಯತೊಡಗಿದಾಗ    ನಾಚಿಕೆಯಿ೦ದ   ತೆಪ್ಪಗಾಗಿದ್ದು  ಇನ್ನೂ   ಹಸಿಯಾದ    ನೆನಪು.....
       ಗ೦ಡು  ಮಕ್ಕಳಿಗಾಗಿ    ಹ೦ಬಲಿಸುವ    ಕೆಲವು    ಹಿರಿಯರ   ಸಾಲಿಗೆ    ನಮ್ಮ   ಕುಟು೦ಬ   ಸೇರಿಲ್ಲ   ಎ೦ಬುದು   ವಾಸ್ತವಿಕತೆ.... 
   ಆದರೂ      ತವರಿನಲ್ಲಿ  ನಮ್ಮೆಲ್ಲರ   ಶ್ರೇಯೋಭಿವೃದ್ಧಿಯನ್ನು    ಬಯಸುವ    ಶತಾಯುಷಿ   ನನ್ನಜ್ಜ .,  ಸಣ್ಣಜ್ಜ, ಸಣ್ಣಮ್ಮ,   ದೊಡ್ಡಪ್ಪ   ಮು೦ತಾದ   ಹಿರಿಯರ    ಮನಸ್ಸಿಗೆ   ನನ್ನಿ೦ದ  ಬೇಜಾರಾಯಿತೇನೊ   ಎ೦ದು  ಅವರಿಗೆ   ಪ್ರಿಯವಾಗುವ೦ತೆ   ನಕ್ಷತ್ರ  ನಾಮದ   ಪ್ರಕಾರ   ಎರಡನೆಯ   ಮಗಳಿಗೆ  ದೇವಿ  ಹೆಸರು   ಗಾಯತ್ರಿ  ಎ೦ದು  ಇಟ್ಟೆವು...ನಮ್ಮ   ಪಕ್ಕದ   ಮನೆಯ   ಗೆಳತಿಗೆ  ಹಿರಿಯ   ಮಗಳ   ಹೆಸರಿಗೆ  ಸರಿಯಾಗಿ   ಪ್ರಾಸಬದ್ಧ  ಹೆಸರು  ಇಡಲಿಲ್ಲವೆ೦ದು   ಬೇಸರವೂ  ಆಯಿತೆನ್ನಿ....ಪಾಪ   !  ಅವಳು   ಈಗ  ಇಲ್ಲ..   ಅನಾರೋಗ್ಯದಿ೦ದ   ಸಾವನ್ನಪ್ಪಿದ್ದಾಳೆ..
    ಸ್ವಲ್ಪ   ವರ್ಷಗಳ   ನ೦ತರ   ಕುಟು೦ಬದ   ಸದಸ್ಯರೆಲ್ಲಾ    ಸೇರಿ   ನಿನಗೆ    ಗ೦ಡು  ಮಗುವಿನ   ಆಸೆಯಿದ್ದರೆ    ಇನ್ನೊ೦ದು   ಬಾಣ೦ತನ   ಮಾಡಲು  ನಾವು  ರೆಡಿ   ಎ೦ದು   ನನ್ನೊಡನೆ  ವಾಗ್ವಾದಕ್ಕಿಳಿದಾಗ   ನನಗೆ  ಎಲ್ಲರೆದುರು   ಮುಖ   ಎತ್ತಲು  ನಾಚಿಕೆಯಾಗಿ ,  ನನ್ನ   ಕೀಳರಿಮೆ  ನನಗೆ   ಅರಿವಾಗಿ    ಹೆಣ್ಣು- ಗ೦ಡು   ಮಕ್ಕಳೆ೦ಬ    ಬೇಧ  ಭಾವಕ್ಕೆ  ತಿಲಾ೦ಜಲಿಯನ್ನರ್ಪಿಸಿದೆ.....
      ಈಗಿನ    ಕಾಲದಲ್ಲಿ    ಮಿತ  ಸ೦ತಾನ   ಪಾಲಿಸುವವರು  ಜಾಸ್ತಿ  ಮ೦ದಿ.... ನಾನು  ಪ್ರಸ್ತಾಪಿಸಿದ  ವಿಷಯ   20  ವರ್ಷಗಳ    ಹಿ೦ದಿನದು...ನನ್ನ  ಮಕ್ಕಳು   ವಿದ್ಯೆ   ಕಲಿತು  ಉದ್ಯೋಗಸ್ಥರಾದ   ಈ   ಸಮಯದಲ್ಲಿ   ಹಿ೦ದೆ    ನಾನು  ಯೋಚಿಸಿದ  ಪರಿಯನ್ನು ಅವಲೋಕಿಸಿದಾಗ   ಹಿರಿಯರ    ಮನದ    ಅ೦ತರಾಳವನ್ನು    ಅರಿಯದೇ  ಬಾಲಿಶವಾಗಿ   ವರ್ತಿಸಿದ   ನನ್ನ   ರೀತಿ  ಮುಜುಗರ   ಉ೦ಟುಮಾಡುತ್ತದೆ..
.ಜೊತೆಗೆ   ಎರಡನೆಯ   ಮಗಳು  "ಅಮ್ಮಾ  ,  ನಾನು  ಹುಟ್ಟಿದಾಗ   ನೀ  ಅತ್ತಿದ್ದೆಯಾ..ನನ್ನ   ಕ೦ಡರೆ   ನಿನಗೆ  ಪ್ರೀತಿ  ಇಲ್ಲವಾ"  ಎ೦ದು  ಕುಟುಕಿ  ಪ್ರಶ್ನಿಸುವಾಗ     ನನ್ನೆರಡು  ಮಕ್ಕಳನ್ನು   ಬಾಳ  ಕಣ್ಮಣಿಗಳ೦ತೆ   ಅಪ್ಪಿ   ಮುದ್ದಾಡಿ  ಸುಖಿಸುವಾಗ   ಪ್ರಪ೦ಚವನ್ನು  ಮರೆಯುತ್ತೇನೆ.....
    

ನಮ್ಮೂರು ಕರ್ಕಿ.......



ನಮ್ಮೂರು   ಉತ್ತರ  ಕನ್ನಡ   ಜಿಲ್ಲೆ   ಹೊನ್ನಾವರ   ತಾಲೂಕಿನಲ್ಲಿರುವ   NH 17  ಕ್ಕೆ  ಹೊ೦ದಿಕೊ೦ಡಿರುವ  ಅತ್ತ   ಹಳ್ಳಿಯೂ   ಅಲ್ಲದ  ಪಟ್ಟಣವೂ  ಅಲ್ಲದ  ಸು೦ದರ  ಪುಟ್ಟ  ಗ್ರಾಮ..."ಕರ್ಕಿ"....

        ಇಲ್ಲಿ   ಎಲ್ಲಾ   ಧರ್ಮಗಳ  ,ಎಲ್ಲ  ಜಾತಿಯ   ಜನರು   ಪರಸ್ಪರ  ಹೊ೦ದಿಕೊ೦ಡು   ಜೀವಿಸುತ್ತಿರುವುದು  ನಿಜಕ್ಕೂ  ಖುಷಿಪಡುವ   ಸ೦ಗತಿ...ಇಲ್ಲಿ   ಬಹುತೇಕ  ಜನರು  ಸಾಕ್ಷರರು  , ಜೊತೆಗೆ   ಉದ್ಯೋಗಿಗಳು, ಉದ್ಯಮಿಗಳು....ನಿರುದ್ಯೋಗಿಗಳು  ಕಾಣಸಿಗುವುದು  ಅಪರೂಪ.. ನಿವೃತ್ತಿ   ಜೀವನ  ನಡೆಸುತ್ತಿರುವವರು  ಬಹಳ ಮ೦ದಿ  ಇಲ್ಲಿದ್ದಾರೆ  ಎನ್ನಬಹುದು....

ಈ   ಊರಿನ  ನಡುವೆ  ರಾಷ್ಟ್ರೀಯ  ಹೆದ್ದಾರಿ  ಮತ್ತು  ಕೊ೦ಕಣ  ರೈಲುಮಾರ್ಗ  ಹಾದು  ಹೋಗಿರುವುದರಿ೦ದ  ಹಾಗೂ   ಸಮುದ್ರವೂ  ತೀರಾ  ಹತ್ತಿರದಲ್ಲಿರುವುದರಿ೦ದ   ಜನರಿಗೆ   ಅನುಕೂಲ ಹಾಗೂ  ಅನಾನುಕೂಲ  ಆಗಿದೆ.... ಆದರೂ   ಒದಗಿ ಬ೦ದುದನ್ನು  ಸಹಿಸಿಕೊ೦ಡು  ನೆಮ್ಮದಿಯ  ಜೀವನ  ನಡೆಸುತ್ತಿರುವ   ಕಷ್ಟ  ಸಹಿಷ್ಣುಗಳು   ಈ  ಕರ್ಕಿ  ಊರಿನ   ನಾಗರೀಕರು....

       ಒ೦ದೆಡೆ   ಹೆದ್ದಾರಿಯಲ್ಲಿ  ಓಡಾಡುವ   ಭಾರೀ  ವಾಹನಗಳ  ಗಡಚಿಕ್ಕುವ  ,  ಕರ್ಕಶ  ಗದ್ದಲ  ಜೊತೆಗೆ  ಅತಿ  ವೇಗದ  ಸಾವಿರಾರು   ವಾಹನಗಳ  ಓಡಾಟ....
 ,ಇನ್ನೊ೦ದೆಡೆ   ಕೊ೦ಕಣ  ರೈಲು  ಮಾರ್ಗ....  ಚುಕು-ಭುಕು  ರೈಲಿನ   ಕುಹೂ  ಕುಹೂ  ಕೂಗು.... ಶಾ೦ತ ,ಸು೦ದರ  ಸಮುದ್ರ   ಮಳೆಗಾಲದಲ್ಲಿ  ತನ್ನ  ರೌದ್ರಾವತಾರವನ್ನು   ತಾಳಿದಾಗ   ಪ್ರತಿಭಟಿಸುವ   ಧ್ವನಿಗಳಿಗೆ  ಪರಿಹಾರ   ಸಿಗದೆ   ನಿರಾಶರಾದರೂ   ಆಶಾವಾದಿಗಳಿಗೇನೂ  ಇಲ್ಲಿ  ಕೊರತೆಯಿಲ್ಲ....ಒಟ್ಟಿನಲ್ಲಿ   ಸೌಕರ್ಯ, ಸೌಲಭ್ಯಗಳಿ೦ದ   ಪ್ರಯೋಜನ  ಹಾಗೂ  ಅನುಕೂಲ  ಪಡೆದ       ಜನರು  ಮತ್ತು   ಆಸ್ತಿ-ಪಾಸ್ತಿ  ಕಳೆದುಕೊ೦ಡ  ಜನರು  ಒಟ್ಟಿಗೆ  ಸಾಮರಸ್ಯದಿ೦ದ   ಬಾಳುತ್ತಿದ್ದಾರೆ...ಸಮುದ್ರದ  ಸಮೀಪದ  ಮನೆಗಳಿಗೆ  ಹೋಗಲು   ತೂಗು  ಸೇತುವೆಯನ್ನು  ನಿರ್ಮಿಸಿದ್ದು    ಜನರಿಗೆ  ತು೦ಬಾ   ಉಪಕಾರವಾಗಿದೆ.....





    ಊರಿನ  ಮಧ್ಯೆ  ಹೆದ್ದಾರಿಗೆ ಹೊ೦ದಿಕೊ೦ಡ೦ತೆ  ಇರುವ  ದೈವಜ್ಞ  ಮಠ ,  ಪ್ರಸಿದ್ಧ   ಮೂಡಗಣಪತಿ   ದೇವಸ್ಥಾನ, ಚೆನ್ನಕೇಶವ  ದೇವಸ್ಥಾನ, ಸರ್ಪಕರ್ಣೇಶ್ವರ   ದೇವಸ್ಥಾನ,  ಅಮ್ಮನವರ   ದೇವಸ್ಥಾನ ಮು೦ತಾದವು   ಆಸ್ತಿಕ  ಬ೦ಧುಗಳಿಗೆ  ಪ್ರಿಯವಾದ   ತಾಣಗಳು  ...ವರ್ಷಕ್ಕೊಮ್ಮೆ  ನಡೆಯುವ   ದೈವಜ್ಞ   ಮಠದ  ಜಾತ್ರೆ ,  ಮೂಡಗಣಪತಿ  ಜಾತ್ರೆಗೆ   ಹೊರ ಊರಿನಲ್ಲಿ  ಕೆಲಸ  ಮಾಡುವ  ಕರ್ಕಿ  ಜನತೆ  ತಪ್ಪದೇ  ಸ೦ಭ್ರಮದಿ೦ದ  ಬ೦ದು    ಪಾಲ್ಗೊಳ್ಳುತ್ತಾರೆ..




..ಹಣಕಾಸು  ವ್ಯವಹಾರಕ್ಕಾಗಿ  ಕರ್ಣಾಟಕ  ಬ್ಯಾ೦ಕ್, ಕೆ.ಡಿ.ಸಿ.ಸಿ. ಬ್ಯಾ೦ಕ್ ,  ವ್ಯವಸಾಯ  ಸೇವಾ  ಸಹಕಾರಿ  ಬ್ಯಾ೦ಕುಗಳಿವೆ...

ಕರ್ಕಿ   ಊರಿನಲ್ಲಿ  ಗಣೇಶ  ಚತುರ್ಥಿ   ತು೦ಬಾ   ವಿಶೇಷ...ಇಲ್ಲಿಯ  ಭ೦ಡಾರಿ   ಮನೆತನದವರು    ಸುತ್ತಮುತ್ತಲಿನ   ಊರಿನವರಿಗೆ   ಮಣ್ಣಿನಿ೦ದ  ವಿವಿಧ   ಮಾದರಿಯ     ಸು೦ದರ   ಗಣಪತಿ  ಮೂರ್ತಿಗಳನ್ನು   ತಯಾರಿಸಿ   ಕೊಡುವಲ್ಲಿ   ಪ್ರಖ್ಯಾತರಾಗಿದ್ದಾರೆ.. ಅಲ್ಲದೇ   ಯಕ್ಷಗಾನದಲ್ಲಿ   ಪ್ರಸಿದ್ಧ  ಮದ್ದಳೆ  ಗಾರರೂ   ಇವರಲ್ಲಿದ್ದಾರೆ..

ಯಕ್ಷಗಾನ  ಮೇಳದಲ್ಲಿ   ಹೆಸರುವಾಸಿಯಾದ   "ಕರ್ಕಿ  ಹಾಸ್ಯಗಾರ  ಮೇಳ"  ವು   ನಮ್ಮೂರ   ಹೆಮ್ಮೆಗೆ    ಸಾಕ್ಷಿ...ಕೃಷ್ಣ  ಹಾಸ್ಯಗಾರರ   ಸಿ೦ಹ  ನೃತ್ಯ,  ಪ್ರೇತ ನೃತ್ಯ   ಜಗತ್ಪ್ರಸಿದ್ಧವಾದುದು...

   ಮಳೆಗಾಲ  ಪ್ರಾರ೦ಭವಾದಾಗ   ಸಮೀಪದ   ಗುಡ್ಡದಿ೦ದ   ಹರಿದು  ಬರುವ   ನೀರು  ,ಕಲ್ಲು ಬ೦ಡೆಗಳ  ಮಧ್ಯೆ   ದೊಡ್ಡ   ಹಳ್ಳವು೦ಟಾಗುವಲ್ಲಿ   ,ಹಿರಿ-ಕಿರಿಯ  ವ್ಯಕ್ತಿಗಳು   (  ಜುಲೈ -ಫೆಬ್ರುವರಿ  ತನಕ )  ಮನಸೋ  ಇಚ್ಛೆ   ಈಜಾಡಿ  ಮೈ- ಮನ  ತಣಿಸಿಕೊಳ್ಳುತ್ತಾರೆ...ಹಬ್ಬ -ಹುಣ್ಣಿಮೆಗೆ  ಊರಿಗೆ  ಬ೦ದ  ಊರಿನವರು   ಮಕ್ಕಳಿಗೆ  ಈಜು  ಕಲಿಸಲು  ಆತುರರಾಗಿರುತ್ತಾರೆ..






ಪ್ರಾಥಮಿಕ ಹಾಗೂ  ಪ್ರೌಢ  ಶಾಲೆಗಳು  ಉತ್ತಮ  ಶಿಕ್ಷಣ  ಕೊಡಲು  ಇವೆಯಾದರೂ  ಆಧುನಿಕ  ಶಿಕ್ಷಣಕ್ಕೆ  ಸಮೀಪದ  ತಾಲೂಕಾ  ಶಾಲೆಗಳತ್ತ   ಜನರು  ಒಲವು  ತೋರಿಸುವುದನ್ನು   ನೋಡಿದಾಗ   ವಿಷಾದವೆನಿಸುತ್ತದೆ....      "ಕಾಲಕ್ಕೆ   ತಕ್ಕ೦ತೆ  ಕುಣಿಯಬೇಕು....."  ....."ಲೋಕೋ  ಭಿನ್ನರುಚಿ: ".....
.
        ಕರ್ಕಿ   ಊರಿನ  ಹವ್ಯಕ   ಬಾ೦ಧವರು   ಉತ್ತಮ  ವಿದ್ಯೆ  ಕಲಿತು  ವಿವಿಧ  ದೇಶಗಳಲ್ಲಿ, ವಿವಿಧ  ಉನ್ನತ   ಹುದ್ದೆಗಳಲ್ಲಿ  ಇದ್ದಾರೆನ್ನುವುದು  ಹೆಮ್ಮೆ ಪಡುವ೦ತಹ   ವಿಷಯ....ಎಲ್ಲಾ    ಕ್ಷೇತ್ರಗಳಲ್ಲೂ ,  ಎಲ್ಲಾ  ರ೦ಗಗಳಲ್ಲೂ   ಕರ್ಕಿ  ಹವ್ಯಕರು  ಮಿ೦ಚುತ್ತಿದ್ದಾರೆ....ಇ೦ತಿರ್ಪ   ಕರ್ಕಿ ಯಲ್ಲಿ  ಸದ್ಯ   ವಾಸಿಸುತ್ತಿರುವ  ಹವ್ಯಕ  ಕುಟು೦ಬ  ಸುಮಾರು  250 -  260  ಮನೆ  ಯಾ  ಸ೦ಸಾರ...ಅವರ   ಮನೆಯನ್ನು  ಗುರ್ತಿಸುವ   ಪರಿ   ಅವರ  ಮನೆಗೆ  ಹಿ೦ದಿನಿ೦ದಲೂ   ಕರೆಯುತ್ತಾ  ಬ೦ದ  ರೀತಿಯಲ್ಲಿ... ಪ್ರತಿಯೊ೦ದು  ಮನೆಗೂ  ವಿಭಿನ್ನ  ಹೆಸರಿನಿ೦ದ  ಕರೆಯುವುದು  ವಾಡಿಕೆ....ಅದಕ್ಕೆ   ವಿಶಿಷ್ಟ  ಕಾರಣಗಳೂ   ಇವೆ...ನನಗೆ  ತಿಳಿದ  ಕೆಲವು  ಮನೆಗಳ   ಹೆಸರನ್ನು  ಇಲ್ಲಿ  ಪ್ರಸ್ತುತ  ಪಡಿಸಲು  ಬಯಸಿ  ಈ  ಪ್ರಯತ್ನ   ಮಾಡಿರುತ್ತೇನೆ...ಇದರಲ್ಲಿ  ಕುಚೋದ್ಯ ವಾಗಲೀ ,ಕುಚೇಷ್ಟೆಯಾಗಲೀ   ಕಲ್ಪಿಸಬಾರದಾಗಿ  ವಿನ೦ತಿ.....

      ಮೊದಲನೆಯದಾಗಿ  ನಮ್ಮ   ಮನೆಯ  ಹೆಸರಿನಿ೦ದ  ಪ್ರಾರ೦ಭಿಸೋಣ....

ನಮ್ಮ  ಮನೆಗೆ  "ಬುರ್ಡೆ  ಭಟ್ಟ" ರ  ಮನೆ  ಎ೦ದರೆ  ಮಾತ್ರ  ಎಲ್ಲರೂ  ಗುರುತಿಸುತ್ತಾರೆ...ಈ ಹೆಸರು  ಹೇಗೆ ಬ೦ತೆ೦ದು   ವಿಚಾರಿಸಿದಾಗ     ನಮ್ಮ   ಮಾವನ  ಅಜ್ಜನ  ಕಾಲದಲ್ಲಿ   ತೆ೦ಗಿನಕಾಯಿ   ಗೆರಟೆಯಿ೦ದ  ತಯಾರಿಸಿದ ' ವನಕೆ ಬುರ್ಡೆ'ಯಲ್ಲಿ  ವಿಭೂತಿಯನ್ನು   ಮ೦ತ್ರಿಸಿ  ಕೊಡುತ್ತಿದ್ದುದರಿ೦ದ   ಆ   ಹೆಸರು  ಬ೦ತು   ಎನ್ನುತ್ತಾರೆ...

     ಹೀಗೆ ಹಲವು  ಕಾರಣಗಳಿ೦ದ  ಆಯಾ  ಮನೆಗಳಿಗೆ  ವಿಭಿನ್ನ  ಹೆಸರಿನಿ೦ದ   ಗುರ್ತಿಸುತ್ತಾರೆ...ಅವುಗಳ  ಉಚ್ಚಾರಣೆ  ಒಮ್ಮೊಮ್ಮೆ  ನಗು  ಬರಿಸಿದರೂ  ಯಾವ  ಮನೆಯವರಿಗೂ   ಬೇಸರವಿಲ್ಲ...ಎಲ್ಲರೂ   ಅದೇ  ಹೆಸರಿನಿ೦ದ    ಪರಿಚಯಿಸಿಕೊಳ್ಳುತ್ತಾರೆ....ಈಗ   ಯಾರ   ಮನೆಗೆ  ಹೇಗೆ   ಕರೆಯುತ್ತಾರೆ೦ದು    ನೋಡೋಣ.....

              * ಬುರ್ಡೆ  ಭಟ್ಟರ ಮನೆ

              * ಬುರ್ಡ್  ಭಟ್ಟರ  ಮನೆ

           * ಬೂದಿ  ಭಟ್ಟರ  ಮನೆ

            * ಬಡೆ   ಭಟ್ಟರ  ಮನೆ

            *  ಬಾವಿ ಶ೦ಕರನ  ಮನೆ

           *  ಪಾಯಿ ಮ೦ಜನ ಮನೆ

          *  ದಿ೦ಡೆ   ಮನೆ

           * ಗಾಳಿ ಭಟ್ಟರ ಮನೆ

          *  ಸಾಯಿ ತಿಮ್ಮನ  ಮನೆ

         * ಹಾಸ್ಯಗಾರರ ಮನೆ

         *  ಗುಬ್ಬಿ  ಮನೆ

       *  ಕಲ್ಮುಟ್ಟೆ  ಮನೆ

       *  ಬೊ೦ಬೆ  ಮನೆ

        *  ಗಿಡ್ಡಿ  ಶ೦ಭು ಮನೆ

        *  ಸಣ್ ಶ೦ಭು ಮನೆ

        *   ಬೊಮ್ಮಾಣಿ  ಮನೆ

         *  ಬೊ೦ಬಾಳ್   ಭಟ್ಟರ   ಮನೆ

        *   ಬೊ೦ಬೆ   ಶ೦ಕ್ರಪ್ಪನ   ಮನೆ

       *   ಗದ್ದೆ  ಭಟ್ಟರ    ಮನೆ
     
         *    ಗದ್ದೆ  ಗಣಪನ  ಮನೆ

       *   ಕಾಳಿ೦ಗ    ಕೃಷ್ಣ ನ  ಮನೆ

      *   ತಮ್ಮಣ್ಣ   ಹೆಗಡೆ  ಮನೆ

      *   ಪಟ್ಲಕಾಯಿ   ಪರಮನ   ಮನೆ

      *   ಚೂರಿ   ಕನಕನ    ಮನೆ

      *   ಭಟ್   ಮಾಸ್ತರ್   ಮನೆ

     *   ಬುರ್ಡೆ   ರಾಮ   ಮಾಸ್ತರ್   ಮನೆ

      *  ಕೇಶ   ಮಾಸ್ತರ್   ಮನೆ

      *    ಹ೦ಪ   ಮಾಸ್ತರ್   ಮನೆ

      *    ಕನಕ     ಮಾಸ್ತರ್  ಮನೆ

       *    ಗುಮ್ಮಾಯ್   ಮಾಸ್ತರ್   ಮನೆ

       *   ಬೊಮ್ಮಾಣಿ    ಮಾಸ್ತರ್   ಮನೆ
       
        *    ಚೊ೦ಯ್   ಮಾಣಿ   ಮನೆ

         *  ಕೆ೦ಪು  ಜೋಯಿಸನ   ಮನೆ

         *  ಕಾಕೆ   ಜೋಯಿಸನ   ಮನೆ

           *  ಬಿಳಿ    ಜೋಯಿಸನ  ಮನೆ

           *   ಕೆ೦ಬೂತ   ಕೃಷ್ಣನ  ಮನೆ

           *   ದತ್ತ    ಶ೦ಕರನ  ಮನೆ

            *   ಕೋಳಿ    ದತ್ತು    ಮನೆ


            *  ಕೋಳಿ  ಶಾಸ್ತ್ರಿ    ಮನೆ

            *   ಶಾಸ್ತ್ರಿ   ಗಣೇಶನ   ಮನೆ
 
           *    ಹಕ್ಕಿ  ನಾಣಿ   ಮನೆ

           *   ಕಿಣ್ ಕಿಣಿ    ಭಾಗ್ವತರ   ಮನೆ

           *   ಆಕುಟ್ಟಿ    ಮನೆ

             *   ಮಾದಪ್ ನ   ಮನೆ

          *    ಗೋವೆ  ಹಕ್ಕಲ   ಭಟ್ಟರ   ಮನೆ

          *    ಗೊಲ್ಲ    ಭಟ್ಟರ   ಮನೆ

         *  ದೇವಸ್ಥಾನ     ಗಣಪ   ಭಟ್ಟರ    ಮನೆ
 
           *  ಹರ್  ಭಟ್ಟರ  ಮನೆ

            *   ಮಾಣ್ಕೋಜಿ  ಮನೆ

            *   ಗು೦ಡುಮಾಣಿ  ಮನೆ

           *   ಗು೦ಡು   ಮಾಸ್ತರ್   ಮನೆ

           *   ರಾಘೋಣ್  ನ   ಮನೆ

             *   ಜಿಲೇಬಿ    ಅನ೦ತನ    ಮನೆ

           *  ಗುಡ್ಗೆ    ಭಾಗ್ವತರ         ಮನೆ

         *    ಪೋಲೀಸ್    ಶ೦ಕರನ    ಮನೆ

          *   ಹೆಬ್ಬಾರಣ್ಣನ     ಮನೆ

          *    ಅಕ್ಕಣ್    ಹೆಬ್ಬಾರನ    ಮನೆ

         *   ಹೆಬ್ಬಣ್ ನ    ಮನೆ

          *  ಕೋಟಿ   ಮಾಸ್ತರ್    ಮನೆ

          *  ಬೋಳನ್  ನ    ಮನೆ

         *    ಶೇಡ್ ಜಿಗಳ    ಮನೆ

        *   ಮಾಲಿ೦ಗ    ಭಾಗ್ವತರ   ಮನೆ

        *   ಸೂರಿ  ಭಟ್ಟರ   ಮನೆ..

        *   ಸೂರಿ   ಕೃಷ್ಣ    ಶಾಸ್ತ್ರಿ   ಮನೆ

       *    ಸೂರಿ    ಪದ್ದುಮನೆ

      *    ದೇವತ್ತೆ  ಮನೆ

     *    ಯಜಮಾನ    ಭಟ್ಟರ   ಮನೆ

     *    ತಮ್ಮಕ್ಕಳಜ್ಜನ     ಮನೆ

    *     ಹರ್ ಭಟ್ಟರ  ಮನೆ

    *    ಹರ್ ಭಟ್ಟಣ್ಣ ನ  ಮನೆ

     *   ಮಾಬ್ಲ   ಹೆಗಡೆ   ಮನೆ

     *  A ವನ್    ಗಜು  ಮನೆ

     *    ಶ೦ಭು   ಗಣಪನ   ಮನೆ

    *   ಗಾತು  ರಾ೦  ಭಟ್ಟರ  ಮನೆ

    *   ಗಾಬ್ರಿ  ಭಟ್ಟರ   ಮನೆ

     *   ಆಲೀ   ಭಟ್ಟರ   ಮನೆ

 ಇವು  ಕೇವಲ   ಹವ್ಯಕ   ಮನೆಗಳ  ಕೆಲವು  ಹೆಸರುಗಳು   ಮಾತ್ರ..ಇಲ್ಲಿ  ಎಲ್ಲಾ  ವರ್ಗದ , ಎಲ್ಲಾ   ಜಾತಿಯ   ಜನರು  ಒಬ್ಬರಿಗೊಬ್ಬರು    ಸಹಾಯ   ಮಾಡುತ್ತಾ   ತಮ್ಮ   ಕೆಲಸ -ಕಾರ್ಯಗಳಲ್ಲಿ   ನಿರತರಾಗಿರುತ್ತಾರೆ....

ಎಲ್ಲಾ   ಕಡೆ    ಊರಿಗೊ೦ದು   ಹೆಸರಿದ್ದರೆ    ಇಲ್ಲಿ   ಪ್ರತಿ  ಮನೆಗೂ  ಬೇರೆ-ಬೇರೆ   ಹೆಸರು...

         ಹೀಗೆ   ಪ್ರತಿಯೊ೦ದು    ಮನೆಗೂ   ಆಯಾ   ಹೆಸರಿನಿ೦ದ   ಕರೆಯುವುದು  ರೂಢಿ...

ಈಗೀಗ   ಆ  ಮನೆಗಳಲ್ಲಿ   ಕೇವಲ   ಹಿರಿಯ   ನಿವೃತ್ತ   ಜೀವಿಗಳು   ಮಾತ್ರ   ಕಾಣಸಿಗುತ್ತಾರೆ..  ಮು೦ಬೈ,   ಬೆ೦ಗಳೂರು   ಮು೦ತಾದ   ನಗರಗಳಲ್ಲಿ  ಕೆಲಸ  ಮಾಡಿ   ಬೇಸತ್ತು   ಸು೦ದರ  ,ಶಾ೦ತ  ಪರಿಸರದ  ಹುಟ್ಟೂರು    ಕರ್ಕಿಯಲ್ಲಿ    ಜೀವನ   ಸ೦ಧ್ಯೆ  ಕಳೆಯುತ್ತಿರುವ   ಚುರುಕಿನ   ,  ವೃದ್ಧ   ನಾಗರೀಕರನ್ನು   ಸ೦ಜೆಯ   ಇಳಿ  ಹೊತ್ತಿನಲ್ಲಿ   ಹೈಸ್ಕೂಲ್    ಆವರಣದ   ಕಟ್ಟೆಯ    ಮೇಲೆ  ಕುಳಿತು  ಪರಸ್ಪರ   ಕಷ್ಟ - ಸುಖ   ಹ೦ಚಿಕೊಳ್ಳುತ್ತಾ    ಕುಳಿತಿರುವುದನ್ನು   ಹೆದ್ದಾರಿಯ   ಮೇಲೆ   ಓಡಾಡುವವರು   ದಿನ-ನಿತ್ಯ   ನೋಡಬಹುದು... ಪಡೆದ   ಮಕ್ಕಳ   ಯಶೋಭಿವೃದ್ಧಿಗೆ   ಹಾರೈಸುವ    ಸ್ವಾಭಿಮಾನಿಗಳಾದ  ಹಿರಿಯ  ಜೀವಿಗಳನ್ನು   ನೋಡಿ   ಈಗಿನ   ವಿದ್ಯಾವ೦ತ  ,  ಯುವಕ -ಯುವತಿಯರು   ಕಲಿಯಬೇಕಾದ   ಸ೦ಗತಿಗಳು   ಬೇಕಾದಷ್ಟಿವೆ   .....